Today's Quote...

"Brightness is sun's nature, coolness is
water's nature, heat fire's nature. Similarly the
nature of Atma is Sath (Absolute Existence),
Chith (Absolute Knowledge) Ananda
(Absolute Bliss), Permanence and Purity." - Atmabodha, Aadi Sankaracharya.

Sunday, November 7, 2010

ಈ ಪ್ರಯತ್ನಕ್ಕೆ ಖರ್ಚಿಲ್ಲ....

ಮೂರು ದಿನದಿಂದ ಎಲ್ಲಿ ನೋಡಿದರೂ ಬೆಳಕು, ಶಬ್ಧ, ಹೊಸ ಬಟ್ಟೆ. ಸಿಹಿ ತಿಂಡಿಗಳ ಸುವಾಸನೆ ಒಂದೆಡೆಯಾದರೆ ಮತ್ತೊಂದೆಡೆ ಪಟಾಕಿಗಳ ಹೊಗೆಯ ಘಾಟು... ದೂರದರ್ಶನದ ಪ್ರತಿಯೊಂದು ಛಾನೆಲ್ ನಲ್ಲೂ ’ಹೊಚ್ಚ ಹೊಸ ಚಲನಚಿತ್ರ’ ಗಳ ಕೂಗು, ಹರಟೆ ಕಾರ್ಯಕ್ರಮಗಳು, ದಿನಪತ್ರಿಕೆಗಳಲ್ಲೆಲ್ಲಾ ರಿಯಾಯಿತಿ (ದರದಲ್ಲಿ?) ಮಾರಾಟಗಳು. ಮನೆಯ ಯಜಮಾನರಿಗೆ ಪೂಜೆ ಸಡಗರವಾದರೆ, ಹೆಂಗಸರಿಗೆ, ಪಕ್ಕದ ಮನೆಗಿಂತ ನಮ್ಮ ಮನೆಯ ಅಡುಗೆಯ ಪರಿಮಳ ಏನು ಕಮ್ಮಿ ಎಂದು ಪೈಪೋಟಿಯಲ್ಲಿ ಹಬ್ಬದಡಿಗೆಯ ಸಂಭ್ರಮ, ಸಂಜೆಯೆಲ್ಲ ಸಿಂಗಾರ.


ನವದಂಪತಿಗಳಿಗೆ ಎಲ್ಲಿ ನೋಡಿದರೂ ಸಿಹಿ ತಿಂಡಿಗಳು. ಚಿಕ್ಕ ಮಕ್ಕಳಿಗೆ ಮತಾಪುಗಳು, ಸುರು ಸುರು ಬತ್ತಿಗಳು, ಕಿರುಚಿ ಅಳುತ್ತಿರುವ ಮಕ್ಕಳನ್ನು ಎತ್ತಿಕೊಂಡು ಪಟಾಕಿ ಹತ್ತಿಸುತ್ತಿರುವ ಅಪ್ಪ, ಚಿಕ್ಕಪ್ಪ ಅಥವಾ ಮಾವ. ಮಾರು ದೂರದಿಂದ ಪಟಾಕಿ ಹೊಡಯಲೇಬೇಕು ಎನ್ನುವ ಪ್ರಯತ್ನದಲ್ಲಿ ನಿರಂತರವಾಗಿ ತೊಡಗಿರುವ ಹೆಂಗಸರು. ನಮ್ಮ ದೂರದರ್ಶನದ ನಿರೀಕ್ಷಿಸಿದ ಕಾಯಕ್ರಮಗಳು...

ನನಗೀ ’ದೀಪಾವಳಿ’ ಎಂದರೆ ಅದೇನೋ ಒಂದು ರೀತಿಯ ಸಂತೋಷ ಇರುತ್ತಿತ್ತು ಚಿಕ್ಕಂದಿನಲ್ಲಿ...ಆ ಪಟಾಕಿ ಹೊಡೆಯುವ ಉತ್ಸಾಹ, ಸುತ್ತಲೂ ಬೇರೆಯವರು ಹೊಡೆಯುವುದನ್ನು ಕಾದು ನೋಡುವ ಆಸೆ. ದೀಪಕ್ಕೆ ಇರುವ ಮಹತ್ವ ಆಗ ತಿಳಿಯದಿದ್ದರೂ...ಈ ಪಟಾಕಿಯನ್ನು ಯಾಕೆ, ಯಾರು ಕಂಡುಹಿಡಿದರು, ನಿಜವಾಗಲೂ ಇವೆಲ್ಲಾ ಹಿಂದೆಯೂ ಚಾಲ್ತಿಯಲ್ಲಿತ್ತಾ ಎನ್ನುವ ಹಲವು ಪ್ರಶ್ನೆಗಳು ಕಾಡುತ್ತಿತ್ತಷ್ಟೆ. ಈಗ ಆ ಪಟಾಕಿ ಹೊಡೆಯುವ ಆಸೆ, ಉತ್ಸಾಹ ಅಷ್ಟಿಲ್ಲ ಆದರೆ ನನಗನ್ನಿಸುವುದು, ನಮ್ಮ ಮನಸ್ಸಿನ ಹಾಗು ಬುದ್ದಿಯ ದೀಪವನ್ನು ಹಚ್ಚದೆ ನಾವು ಆಚರಿಸುವ ಯಾವ ದೀಪಾವಳಿಗೂ ಅರ್ಥವಿಲ್ಲವೆಂದು.

ಯಾರಿಗೂ ತೊಂದರೆ ಕೊಡದೆ ನನ್ನಷ್ಟಿಗೆ ಬದುಕಿ ಸಾಯುತ್ತೇನೆನ್ನುವ ಹಲವಾರು ಮಾನವರು ಅವರೊಂದು ಮೃಗಕ್ಕೆ ಸಮಾನರೆಂದು ಅರಿಯರು. ನಮ್ಮ ಹುಟ್ಟಿಗೊಂದು ಮಹತ್ವವಿದೆಯೆಂದು ಆದಷ್ಟು ಬೇಗ ಅರಿತು, ’ಲೈಫು ಇಷ್ಟೇ’ ಆದರೂ ಅದರ ಸಂಪುರ್ಣ ಸಾರವನ್ನು ಅರಿಯಬೇಕೆನಿಸುತ್ತದೆ. ಈ ದೀಪಾವಳಿಯ ದೀಪದೊಳಗಿನ ಆ ಬತ್ತಿಯಂತೆ, ತನ್ನನ್ನೇ ಉರಿಸಿ ಸುತ್ತಲೆಲ್ಲರಿಗೂ ಸಂತೋಷವನ್ನಿತ್ತಂತೆ, ನಾವೂ ಕೈಲಾದಷ್ಟು ಬೇರೆಯವರ ಸಂತೋಷಕ್ಕಾಗಿ ನಮ್ಮ ಜೀವನವನ್ನು ಮುಡುಪಾಗಿಡಬಹುದಲ್ಲವೇ? ಇದಕ್ಕೆ ದೊಡ್ಡ ದೊಡ್ಡ ಸಮಾಜ ಸೇವೆಗಳಾಗಲೀ, ಹೆಚ್ಚಿನ ಆರ್ಥಿಕ ಸಹಾಯವಾಗಲೀ ಬೇಕಿಲ್ಲ, ನಮ್ಮ ಸುತ್ತಲಿನ ಜನರೊಂದಿಗೆ ಆದಷ್ಟು ಸಂತೋಷದ ಮಾತುಗಳಿಂದ ನಮಗೆಷ್ಟೇ ಸಂಕಟಗಳಿದ್ದರೂ, ಪರಚಿ ಪರಚಿ ಗಾಯವನ್ನು ಹುಣ್ಣಾಗಿಸುವ ಮಂಗನಂತಾಗದೆ, ದೀಪದ ಬತ್ತಿಯಂತಾಗಬಹುದೆನಿಸುತ್ತದೆ. ಒಮ್ಮೆ ಪ್ರಯತ್ನಿಸಿ ನೋಡಿ..ಯಾಕೆಂದರೆ ನನ್ನ ಅನುಭವದಂತೆ ಇದೊಂದು ಸುಂದರ ಪರಿಣಾಮವನ್ನಿತ್ತಿದೆ. ಒಮ್ಮೊಮ್ಮೆ ಮನಸ್ಸು ಮುದುಡಿ ಮೂಲೆ ಸೇರಿ ಅಳುವುದೇನೋ ಎನ್ನುವ ಸಮಯದಲ್ಲಿ ಅದನ್ನೆಲ್ಲಾ ಪಕ್ಕಕ್ಕೆ ಇಟ್ಟು ಒಳ್ಳೆಯ ಕಾರ್ಯದ ಬಗ್ಗೆ ಯೋಚಿಸಲು ಪ್ರಾರಂಭ ಮಾಡುವುದೇ ಮನಸ್ಸು ಹುರುಪಿನಿಂದ ನಲಿಯುವಂತೆ ಮಾಡುತ್ತದೆ...ಕತ್ತಲೆಯಿಂದ ಬೆಳಕಿನೆಡೆಗೆ ಹೋಗಲು ನಾವೇ ಹುಡುಕಿಕೊಳ್ಳಬಹುದಾದ ದಾರಿ, ನಮ್ಮ ಹಳೆಯ ಕೆಟ್ಟ ಆಗುಹೋಗುಗಳನ್ನು, ನಮ್ಮೊಳಗೇ ಅಡಗಿರುವ ಕೆಟ್ಟ ವ್ಯಕ್ತಿತ್ವವನ್ನು ಉರಿಸಿ ನಮ್ಮ ಮುಂದಿರುವ ಒಳ್ಳೆಯ ದಾರಿಗೆ ನಾವೇ ದೀಪವಾಗುವುದು...